ಸಕ್ಕರೆನಾಡಿನಲ್ಲಿ ಮತ್ತೆ ಸದ್ದು ಮಾಡಿದ ನಂಗಾನಾಚ್! | ಜನತಾ ನ್ಯೂಸ್
ಮಂಡ್ಯ : ಮಂಡ್ಯದಲ್ಲಿ ಊರ ಜಾತ್ರೆಯಲ್ಲಿ ಆಯೋಜಿಸಿದ್ದಂತ ಅಶ್ಲೀಲ ನೃತ್ಯದ ಸಂದರ್ಭದಲ್ಲಿಯೇ, ಬಾಲಕನೊಬ್ಬನನ್ನು ವೇದಿಕೆಗೆ ಕರೆದುಕೊಂಡು, ಅಸಭ್ಯವಾಗಿ ಯುವತಿಯರು ವರ್ತಿಸಿರೋ ವೀಡಿಯೋ ವೈರಲ್ ಆಗಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತೊಳಸಿ ಕೊಬ್ರಿ ಗೇಟ್ ಗ್ರಾಮದಲ್ಲಿ ಗ್ರಾಮ ದೇವತೆಯ ಹಬ್ಬಕ್ಕೆ ಬೇರೆಡೆಯಿಂದ ಹುಡುಗಿಯರನ್ನು ಕರೆಸಿ ಆರ್ಕೇಸ್ಟ್ರಾ ಆಯೋಜಿಸಿ ಯುವಕರಿಗೆ ಮೋಜು-ಮಸ್ತಿಯ ವ್ಯವಸ್ಥೆ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಚಿಕ್ಕ ಬಾಲಕನೊಬ್ಬ ಮಾದಕ ಹುಡುಗಿಯರ ಕೈಗೆ ಸಿಲುಕಿ ಹೈರಾಣಾದ ಘಟನೆಯೂ ನಡೆದಿದೆ. ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಶಾಲನ್ನೇ ಕಟ್ಟಿಕೊಂಡು ಡ್ಯಾನ್ಸ್ ಮಾಡಿದರು. ಇಬ್ಬರು ರಾಜಕಾರಣಿಗಳು ವೇದಿಕೆಗೆ ಬಂದು ಹೋದ ಬಳಿಕ ಮಾದಕ ನೃತ್ಯ ಶುರುವಾಯಿತು. ವಿಶ್ವ ಮಹಿಳಾ ದಿನಾಚರಣೆ ದಿನವೇ ಪಡ್ಡೆ ಹುಡುಗಿಯರನ್ನು ಕರೆಸಿ ಮಧ್ಯರಾತ್ರಿ ವರೆಗೂ ಮಾದಕ ನೃತ್ಯ ಕಾರ್ಯಕ್ರಮ ನಡೆಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಟೀಕೆ ಕೇಳಿ ಬರುತ್ತಿವೆ.
ರಾಜಕಾರಣಿಗಳಾದ ಚಲುವರಾಯಸ್ವಾಮಿ ಮತ್ತು ಸುರೇಶ್ ಗೌಡ ಬೆಂಬಲಿಗರು ಗ್ರಾಮದಲ್ಲಿ ಪ್ರತ್ಯೇಕವಾಗಿ ಆರ್ಕೇಸ್ಟ್ರಾ ಆಯೋಜಿಸಿದ್ದರೆಂದು ತಿಳಿದುಬಂದಿದೆ.
ಇದೀಗ ಈ ವೀಡಿಯೋ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಗಮಂಗಲದಲ್ಲಿ ಪಡ್ಡೆ ಹುಡುಗರ ಓಲೈಕೆಗೆ ರಾಜಕಾರಣಿಗಳು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.